Name:
Location: Bangalore, Karnataka, India

Saturday, December 31, 2005

ನನ್ನವರು ಮತ್ತು ಟಿ.ವಿ.

ನನ್ನವರು "ಬದುಕು" ಮೆಗಾಧಾರಾವಾಹಿಯ ನಾಯಕನನ್ನು "ಮಳೆಬಿಲ್ಲು" ಗೆ ಕರೆತರುತ್ತಾರೆ. "ಮಳೆಬಿಲ್ಲು"ನಾಯಕಿ ಪ್ರಜ್ಞಾ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ನನ್ನವರು ಅವಳೆಲ್ಲಿ ಹೋದಳು- ಎಂದು ಪ್ರಶ್ನಿಸುತ್ತಾರೆ. ಪ್ರಜ್ಞಾ ಪಾತ್ರಧಾರಿಗೂ ನಿರ್ಮಾಪಕ-ನಿರ್ದೇಶಕರ ನಡುವೆ ಯಾವ ಜಿಜ್ಞಾಸೆ ಉಂಟಾಯಿತೋ, ನಟಿಸುತ್ತಿದ್ದ ನಟಿ ನಾಪತ್ತೆ - ಆ ನಟಿ ನಾಪತ್ತೆಯಾದರೇನಂತೆ ಪ್ರಜ್ಞಾಎಂಬ ಕಥಾನಾಯಕಿಯ ರೂಪವೆ ಬದಲಾಗಿಬಿಡುತ್ತದೆ ಬೇರೆ ನಟಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಒಮ್ಮೆಲೆ ತೆರೆಯಮೇಲೆ ಕಾಣಿಸಿಕೊಳ್ಳುತ್ತಾಳೆ. ಇದು ಹೇಗೆ ಸಾಧ್ಯ? ಎಂದು ಕೇಳತೊಡಗುತ್ತಾರೆ - ನನ್ನವರು. ನಿಜಜೀವನದಲ್ಲಿ ಅಸಾಧ್ಯ, ಆದರೆ ಟಿ.ವಿ.ಯಲ್ಲಿಸಾಧ್ಯ, ಎಂದು ಉತ್ತರಿಸಿ ಸಮಾಧಾನಗೊಳಿಸಬೇಕಾದರೆ ಸಾಕು ಸಾಕಾಗುತ್ತದೆ. ಹೀಗೆ ರೂಪಾಂತರ ಮಾಡುವ ಬದಲು ಅಮೆರಿಕಾಗೋ, ಮತ್ತೆಲ್ಲಿಗೋ ಕಳುಹಿಸಬಾರದಿತ್ತೇ, ಎಂದೆನ್ನುತ್ತಾರೆ. ನಿರ್ಮಾಪಕರು-ನಿರ್ದೇಶಕರು ಸ್ವಲ್ಪ ಯೋಚಿಸಿ ನನ್ನವರ ತರ್ಕದಂತೆ ಮಾಡಿದರೆ ಚೆನ್ನಾಗಿರ್ತಿತ್ತು, ಎಂದೆನ್ನಿಸುತ್ತದೆ. ನೀನೇನು ಮೆಗಾಧಾರಾವಾಹಿ ನೋಡುತ್ತಾ ಕುಳಿತುಬಿಡುತ್ತೀಯ. ಚರ್ಚೆಗಳಿಲ್ಲ, ಮಾತಿಲ್ಲ, ಕಥೆಯಿಲ್ಲ, ಜಗಳವಿಲ್ಲ, ನೀರಸಜೀವನವಾಗಿದೆ. ತಿಂಡಿ ಇರಲಿ, ಕಾಫೀ ಕೂಡ ಇಲ್ಲವಾಗಿದೆ. ಇವೆಲ್ಲ "ಮೆಗಾ" ಧಾರಾವಾಹಿಗಳಲ್ಲ, "ದಗಾ" ಧಾರಾವಾಹಿಗಳೆಂದು ಟೀಕಿಸುತ್ತಾರೆ. ಇರಲಿ, ಅವರು ಹಾಗೆಂದು ಟೀಕಿಸುತ್ತಾರೆಂದು, ನೋಡುವುದನ್ನು ಬಿಡಲಾದೀತೆ? ಗುಪ್ತ ಗಾಮಿನಿಯ ಭಾವನಾ, ತನ್ನ ಅಪ್ಪ ಯಾರೆಂದು ತಿಳಿದುಕೊಳ್ಳಲು ಒದ್ದಾಡುತ್ತಿರುತ್ತಾಳೆ. ಅಪ್ಪ ಯಾರೆಂದು ಗೊತ್ತಾದ ಮೇಲಾದರೂ ಪಾಪ ಸುಖವಾಗಿರಬೇಡವೇ? ಯಾರೋ ಒಬ್ಬರು ಡುಮ್ಮಂತ ಪ್ರತ್ಯಕ್ಷರಾಗುತ್ತಾರೆ. ಇವನು ಯಾಕೆ ಬಂದ, ಇವನು ಅವನಿಗೆ ಏನಾಗಬೇಕು, ಅವನ ಹೆಂಡತಿ ಇಲ್ಲಿ ಯಾಕಿದ್ದಾಳೆ, ಎಂಬ ಪ್ರಶ್ನೆಗಳಿಗೆ - ಆ ನಿರ್ದೇಶಕನೇನಾದರೂ- ಹತ್ತಿರವಿದ್ದರೆ, ಉತ್ತರಿಸಲಾಗದೆ ತಡಬಡಿಸುತ್ತಿದ್ದ.

ಹಿಂದಿಭಾಷೆಯ ಆ ಪ್ರೇಮಕಥೆಯೋ- ಮುಗಿಯದ ಪ್ರೇಮ. ಪ್ರಸಿದ್ಢ ವೈದ್ಯೆಯ ಗಂಡ, ಅವನಿಗೆ ಒಬ್ಬರನಂತರ ಒಬ್ಬರಂತೆ ಮೂವರು ಹೆಂಡತಿಯರು - ಪ್ರತಿಯೊಬ್ಬರಿಗೂ ಒಂದೊಂದು ಮಗು- ಇದ್ದಕ್ಕಿದ್ದಂತೆ ಅಪಘಾತ - ಪ್ರಸಿದ್ಢವೈದ್ಯೆ ಕುರುಡಿಯಾಗುತ್ತಾಳೆ - ಗಂಡನಿಗೆ ಪಶ್ಚಾತ್ತಾಪ - ಎಲ್ಲರೂ ಅಳುತ್ತಾರೆ- ಇಂತಹ ಮೆಗಾಧಾರಾವಾಹಿ ನೋಡುತ್ತಿರುವೆನಲ್ಲಾ ಎಂದು ನಾನೂ ನನ್ನಬಗ್ಗೆ ಮಮ್ಮಲ ಮರುಗುತ್ತೇನೆ.

ಲಕ್ಷ್ಮೀ, ಅನಂತನಾಗ್ ಚಲನಚಿತ್ರ - ಅವರಿಗೆ ಇಬ್ಬರು ಗಂಡುಮಕ್ಕಳು - ಒಬ್ಬಳೇ ಮಗಳು -ಎಲ್ಲರಿಗೂ ಮದುವೆಯಾಗಿದೆ. ದೊಡ್ಡಮಗನ ಮಗಳು ಸುಮಾರು ಹದಿನೆಂತು-ಇಪ್ಪತ್ತು ವರ್ಷದವಳು - ಕಾಲೇಜಿಗೆ ಹೋಗುತ್ತಿರುತ್ತಾಳೆ. ಅನಂತನಾಗ್ ಲಕ್ಷ್ಮೀಗೆ ಒಂದುಸಂದರ್ಭದಲ್ಲಿ ಹೇಳುತ್ತಾನೆ "ನಿನ್ನನ್ನು ಮದುವೆಯಾಗಿ ಮೂವತ್ತುವರ್ಷಗಳಕಾಲ ಜೊತೆಯಾಗಿದ್ದೀನಿ, ನನ್ನನ್ನು ಅರ್ಥಮಾಡಿಕೊಂಡಿಲ್ಲವೆ?" ಎಂದು. ನನ್ನವರ ಚುರುಕು ಮೆದುಳು ಜಾಗೃತವಾಗುತ್ತದೆ - ಪ್ರಶ್ನೆಯೊಂದು ಬರುತ್ತದೆ - " ಮೊಮ್ಮಗಳು ಕಾಲೇಜಿಗೆ ಹೋಗುತ್ತಾಳೆ- ಅಂದರೆ ಅವಳಿಗೆ ಹದಿನೆಂಟು ವರ್ಷಗಳಾದರೂ ಆಗಿರಬೇಕು - ಅಂದರೆ ಅವಳಪ್ಪ (ಅನಂತನಾಗನ ಮಗ)ನಿಗೆ ನಲವತ್ತು ವರ್ಷವಾದರೂ ಆಗಿರಬೇಕು - ಇವನು(ಅನಂತನಾಗ್) ಮದುವೆಯಾಗಿ ಮೂವತ್ತುವರ್ಷ ಅಂತ ಹೇಳ್ತಾನಲ್ಲಾ ! ಅರ್ಥ ಆಗ್ತಾಇಲ್ಲ." ನನಗೂ ಅರ್ಥ ಆಗ್ತಾ ಇಲ್ಲ, ಎಂದೆ.

ಇನ್ನೊಂದು ಚಲನಚಿತ್ರ - ತಂಗಿ ತುಂಬುಗರ್ಭಿಣಿ - ಅತ್ತೆಯ ಮನೆಯಲ್ಲಿದ್ದಾಳೆ - ಎಲ್ಲರೂ ಅವಳನ್ನು ದೂರಮಾಡಿದ್ದಾರೆ - ಹೊರಕೋಣೆಯಲ್ಲಿ ಒಬ್ಬಳೇ ಇದ್ದಾಳೆ - ಮಧ್ಯರಾತ್ರಿ - ಹೊಟ್ಟೆ ನೋವು ಶುರುವಾಗುತ್ತೆ - ಗಂಡನ ಕೋಣೆಬಾಗಿಲು ತಟ್ಟುತ್ತಾಳೆ -ಕಟುಕ ಗಂಡ ಬಾಗಿಲುತೆರೆದು ದೂಡುತ್ತಾನೆ - ಮಧ್ಯರಾತ್ರಿಯಾದರೂ ದೊಡ್ಡ ಅಂಚಿನ ಕಂಚಿಸೀರೆ ಉಟ್ಟಿರುವ ಅತ್ತೆ ಸೊಸೆಯನ್ನು ಮನೆಯಿಂದ ಆಚೆ ಅಟ್ಟುತ್ತಾಳೆ. ಆ ತಂಗಿ ನೋವಿನಿಂದ ಅಳುತ್ತಾ ಗೋಳಿಡುತ್ತಾ ಅಣ್ಣನ ಮನೆಯ ಬಾಗಿಲು ತಟ್ಟುತ್ತಾಳೆ. ಕರುಣಾಳು ಅಣ್ಣ ಬಾಗಿಲು ತೆರೆದು ತಂಗಿಯನ್ನು ತಬ್ಬಿಕೊಂಡು ಒಳಗೆ ಕರೆತರುತ್ತಾನೆ. ಮರುದಿನ ವೃಂದ ಗಾಯನ, ವೃಂದ ನೃತ್ಯ ನಡೆಸುತ್ತಾನೆ.

ನಮ್ಮವರ ಪ್ರಶ್ನೆಗಳು :-
- ಅಣ್ಣನಮನೆ - ಅತ್ತೆಮನೆ ಒಂದೇ ಊರಾ ?
- ಒಂದೇ ಊರಾದರೆ ಎಷ್ಟು ದೂರ ?
- ಅಷ್ಟು ನೋವಿದ್ದರೂ ಆ ರಾತ್ರಿ ಹೇಗೆ ನಡೆದುಕೊಂಡು ಬರ್ತಾಳೆ ?
- ದಾರೀಲಿ ಯಾರೂ ಇರಲಿಲ್ಲವೇ ?
- ನೋವು-ನೋವು ಅಂತ ನರಳುತ್ತಿದ್ದವಳಿಗೆ ಅಣ್ಣನಮನೆಗೆ ಬಂದ ಕೂಡಲೆ ನೋವು ನಿಂತು ಹೋಯಿತೇ?
- ಹೆರಿಗೆ ನೋವಲ್ಲವೇ ?
- ಅಣ್ಣ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಗಾಯನ, ನೃತ್ಯ ನಡೆಸಲು ಹೇಗೆ ಸಾಧ್ಯ ?
ಇನ್ನೇನು ಪ್ರಶ್ನೆಗಳನ್ನು ಎದುರಿಸಬೇಕಾಗುವುದೋ ಎಂದು ಹೆದರಿ ಟಿ.ವಿ.ಯ ನಿಲುವಿನ ಗುಂಡಿಯನ್ನು ಒತ್ತಿದೆ.
ಉತ್ತರಗಳು ನನಗೆ ಗೊತ್ತಿಲ್ಲ.

ಇಂತಹ ಪ್ರಶ್ನೆಗಳನ್ನು ಹಾಕುವ ನನ್ನವರು ಜಾಣ ಪೆಟ್ಟಿಗೆಯ ಪೂರ್ಣ ವಿರೋಧಿಗಳೇನೂ ಅಲ್ಲ. ವಾರ್ತೆಗಳನ್ನು ತಪ್ಪದೆ ನೋಡಿ ರಾಜಕೀಯ ವಿದ್ಯಾಮಾನಗಳನ್ನು ವಿಶ್ಲೇಷಿಸುತ್ತಾರೆ. ಚೆಂಡು-ದಾಂಡು ಪಂದ್ಯವನ್ನು ಅತ್ಯಂತ ಸಂಭ್ರಮದಿಂದ ವೀಕ್ಷಿಸುತ್ತಾ ವಿವರಣೆಯನ್ನು ನೀಡುತ್ತಾರೆ. ದಾಂಡು ಹಿಡಿದುಕೊಂಡಿರುವ ದಾಂಡಿಗನಾದರೂ ಬೀಸಿಬಂದ ಚೆಂಡನ್ನು ನೋಡದೇ ಇರಬಹುದು, ನನ್ನವರ ನೋಟ ಮಾತ್ರ ಕರಾರುವಾಕ್ಕಾಗಿರುತ್ತದೆ. ಪಾಪ ಚೆಂಡುಬಿಟ್ಟ ದಾಂಡಿಗ ನನ್ನವರ ಸಿಟ್ಟಿಗೆ ಗುರಿಯಾಗುತ್ತಾನೆ.

0 Comments:

Post a Comment

<< Home